೧೯೮೧ ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ತಯಾರಾಗಿರುವ ಈ ಸಾಹಸ ಪ್ರಧಾನ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಅಂಬರೀಷ್ ದ್ವೀಪಾತ್ರದಲ್ಲಿ ನಟಿಸಿದ್ದು ಅನ್ಯಾಯದ ವಿರುದ್ಧ ಹೋರಾಡುವ ಇನ್ಸಪೆಕ್ಟರ್ ಸುಶೀಲ್ ಕುಮಾರ್ ಪಾತ್ರದಲ್ಲಿ ಮಿಂಚಿದರೆ ಇನ್ನೊಂದು ಖಳನಾಯಕ ಕನ್ವರ್ ಲಾಲ್ ಪಾತ್ರದಲ್ಲಿ ಬಂದ ಅಭಿನಯ ಎಲ್ಲರ ಮನಸ್ಸನ್ನು ಗೆದ್ದಿತ್ತಲ್ಲದೆ ಅಂಬರೀಷ್ ಗೆ ರೆಬೆಲ್ ಸ್ಟಾರ್ ಎನ್ನುವ ಇಮೇಜ್ ನೀಡಿತಲ್ಲದೆ ವೃತ್ತಿ ಬದುಕಿನ ಮಹತ್ತರ ಸಿನಿಮಾಗಳಲ್ಲಿ ಒಂದು.
ಇದು ಮೂಲತಃ ಎಚ್.ಕೆ. ಅನಂತರಾಮರು ರಚಿಸಿದ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಈ ಚಿತ್ರದ ವಿಶೇಷವೇನೆಂದರೆ ಸಾಹಸ ಸನ್ನಿವೇಶಗಳಲ್ಲಿ ಬರುವ ರಕ್ತಕ್ಕೆ ಮನುಷ್ಯರ ನಿಜವಾದ ರಕ್ತವನ್ನು ಬಳಸಿದ್ದರು.
ಈ ಚಿತ್ರದಲ್ಲಿ ಇನ್ಸಪೆಕ್ಟರ್ ಸುಶೀಲ್ ಕನ್ವರ್ ಲಾಲ್ ಆಗಿ ಖಳರ ಗುಂಪು ಸೇರಿ ಕನ್ವರ್ ಲಾಲ್ ಆಗಿ ನಟಿಸಿ ಖಳನಾಯಕರನ್ನು ನಂಬಿಸುತ್ತಾನೆ. ಖಳನಾಯಕರು ಏರ್ಪಡಿಸಿದ್ದ ಪಾರ್ಟಿಯಲ್ಲಿ ಅವನ ತಂಗಿಯ ನೃತ್ಯ ಪ್ರದರ್ಶನವನ್ನು ಅನಿರೀಕ್ಷಿತವಾಗಿ ನೋಡಿ ಯಾರಿಗೂ ತೋರಿಸದೇ ವ್ಯಕ್ತಪಡಿಸುವ ರೀತಿ,ಅವನ ತಂಗಿಯು ಅದೇ ಸಮಯದಲ್ಲಿ ನೃತ್ಯ ಮಾಡುತ್ತ ಅವನನ್ನು ನೋಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಎಲ್ಲವೂ ತಿಳಿದಿದ್ದರೂ ಏನು ಮಾಡಲಾಗದೆ ಅಸಹಾಯಕ ಸ್ಥಿತಿಯ ಸನ್ನಿವೇಶದ ಅಂಬರೀಷ್ ಅಭಿನಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಕಡೆಯ ಸನ್ನಿವೇಶದಲ್ಲಿ ಖಳನಾಯಕರಿಗೆ ಸತ್ಯ ಸಂಗತಿ ತಿಳಿದು ಅವನನ್ನು ಹಿಂಸಿಸುತ್ತ ಎದುರಿಗೆ ಅವನ ಹೆಂಡತಿ ತುಂಬು ಗರ್ಭಿಣಿ (ನಟಿ ಲಕ್ಷ್ಮಿ) ಯನ್ನು ಹೊಡೆದು ಹಿಂಸೆ ಮಾಡಿ ಕೊಂದಾಗ ಸಿಡಿದ ಸುಶೀಲ್ ಕುಮಾರ್ ದುಷ್ಟರನ್ನು ಸದೆ ಬಡಿದು ನ್ಯಾಯಕ್ಕಾಗಿ ಕೋರ್ಟ್ ಗೆ ಬಂದು ನಿಲ್ಲುವುದಕ್ಕೆ ಚಿತ್ರವು ಕೊನೆಗೊಳ್ಳುತ್ತದೆ. ಮತ್ತು ಈ ಚಿತ್ರದ ಗೀತೆಗಳು ಕೂಡ ಚಿತ್ರದ ಪ್ಲಸ್ ಪಾಯಿಂಟ್.
ಈ ಚಿತ್ರದ ಸಂಭಾಷಣೆ ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಇಂದಿಗೂ ಜನಪ್ರಿಯವಾಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ತೆಲುಗು ಚಿತ್ರದಲ್ಲಿ ಸೂಪರ್ ಸ್ಟಾರ್ ಕೃಷ್ಣ ನಾಯಕತ್ವದಲ್ಲಿ, ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್ ನಾಯಕತ್ವದಲ್ಲಿ, ಹಿಂದಿಯಲ್ಲಿ ಜಿತೇಂದ್ರ ನಾಯಕತ್ವದಲ್ಲಿ ರಿಮೇಕ್ ಆಗಿ ತೆರೆ ಕಂಡರೂ ಕನ್ನಡ ಚಿತ್ರ ಪಡೆದಷ್ಟು ಯಶಸ್ಸನ್ನು ಉಳಿದ ಮೂರು ಭಾಷೆಯ ರಿಮೇಕ್ ಚಿತ್ರಗಳು ಅಷ್ಟು ಯಶಸ್ಸನ್ನು ಪಡೆಯಲಿಲ್ಲ.
ಲೇಖಕರು : ಶ್ರೀ ಸಂದೀಪ್ ಜೋಶಿ