ಚಿ.ಉದಯಶಂಕರ ಕನ್ನಡ ಚಿತ್ರರಂಗದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು, ಅಲ್ಲದೇ ನಟರು ಕೂಡ ಆಗಿದ್ದರು. ತಮ್ಮ ಅಮೋಘವಾದ ಗೀತೆಗಳ ರಚನೆಗಾಗಿ ಸಾಹಿತ್ಯ ರತ್ನ ಎಂಬ ಬಿರುದು ಪಡೆದಿದ್ದ ಇವರು ನಮ್ಮ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರೊಂದಿಗೆ ಆತ್ಮೀಯ ಒಡನಾಟ ಮತ್ತು ಭಾಂದವ್ಯವನ್ನು ಹೊಂದಿದ್ದರು.
ಫೆಬ್ರುವರಿ ೧೮, ೧೯೩೪ ರಂದು ಮೈಸೂರು ರಾಜ್ಯದ ಹೊಳೆನರಸೀಪುರದಲ್ಲಿ ಚಿ.ಸದಾಶಿವಯ್ಯನವರ ಮಗನಾಗಿ ಜನಿಸಿದ ಇವರ ಪೂರ್ಣ ಹೆಸರು ಚಿಂತನಹಳ್ಳಿ ಉದಯಶಂಕರ್. ಇವರ ತಂದೆ ಹೆಸರು ಚಿ. ಸದಾಶಿವಯ್ಯನವರು ಹೆಸರಾಂತ ಚಿತ್ರ ಸಾಹಿತಿಗಳಾಗಿದ್ದರು. ಇವರ ಪತ್ನಿಯ ಹೆಸರು ಶಾರದಮ್ಮ. ಈ ದಂಪತಿಗೆ ಮೂವರು ಮಕ್ಕಳಿದ್ದು ಇವರ ಮಗ ಚಿ. ಗುರುದತ್ ಚಿತ್ರ ರಂಗದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ.
ತಮ್ಮ ಆರಂಭಿಕ ಜೀವನದಲ್ಲಿ ತಂದೆ ಚಿ.ಸದಾಶಿವಯ್ಯನವರ ಜೊತೆಯಲ್ಲಿದ್ದು ಗೀತೆಗಳನ್ನು ರಚಿಸುತ್ತಿದ್ದ ಇವರು ಚಿತ್ರ ರಂಗದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಬಹಳ ವರ್ಷಗಳಿಂದ ಹೋರಾಡಿದ್ದರು. ಆ ಸಮಯದಲ್ಲಿ ಇವರ ಬದುಕಿನಲ್ಲಿ ಕತ್ತಲು ಆವರಿಸಿತ್ತು. ಆದರೂ ಇವರಿಗೆ ೧೯೬೩ ರಲ್ಲಿ ಸಂತ ತುಕಾರಾಂ ಚಿತ್ರಕ್ಕೆ ಗೀತೆಗಳನ್ನು ರಚಿಸುವ ಅವಕಾಶ ಸಿಗುವುದರ ಮೂಲಕ ಎಷ್ಟೋ ವರ್ಷಗಳಿಂದ ಪಟ್ಟ ಕಷ್ಟಕ್ಕೆ ತೃಪ್ತಿಕರವಾದ ಫಲವು ದೊರೆಯಿತು.
ಸಂತ ತುಕಾರಾಂ ನಮ್ಮ ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅಭಿನಯದ ಈ ಚಿತ್ರವು ಶಿತಾಲವಸ್ಥೆಯಲ್ಲಿದ್ದ ಇವರ ಚಿತ್ರ ರಂಗದ ಭವಿಷ್ಯಕ್ಕೆ ಆಮ್ಲಜನಕ ರೂಪದಲ್ಲಿ ದೊರೆಯಿತು. ಈ ಚಿತ್ರದ ಗೀತೆಗಳು ಎಷ್ಟು ಪ್ರಸಿದ್ಧಿಯಾಗಿದ್ದವೆಂದರೆ ಇಂದಿಗೂ ಈ ಗೀತೆಗಳನ್ನು ಬಹಳಷ್ಟು ಜನ ಅಭಿಮಾನಿಗಳು ಮರೆತಿಲ್ಲ. ಈ ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದಲ್ಲದೆ ಮೊದಲ ಬಾರಿಗೆ ಸಂಭಾಷಣೆಯನ್ನು ಬರೆದಿದ್ದರು. ಈ ಚಿತ್ರದ ನಂತರ ಇವರು ಕೆಲಸ ಮಾಡಿದ ಚಿತ್ರಗಳೆಲ್ಲ ಭರ್ಜರಿ ಯಶಸ್ಸು ಗಳಿಸಿದ್ದವು.
ಇವರು ತಮ್ಮ ಚಿತ್ರರಂಗದ ಜೀವನದಲ್ಲಿ ರಚಿಸಿದ ಗೀತೆಗಳಲ್ಲಿ ಕೆಲವು ವಿಶೇಷಗಳಿವೆ. ಸುಲಭವಾದ ಪದಗಳನ್ನು ಬಳಸಿ ಸರಳವಾಗಿ ರಚಿಸುತ್ತಿದ್ದರಿಂದ ಇವರ ಸಾಹಿತ್ಯವು ಎಂತಹವರಾಗಿದರೂ ಅರ್ಥವಾಗುತ್ತಿತ್ತು. ಅದರಲ್ಲೂ ಇವರು ಕಸ್ತೂರಿ ನಿವಾಸ ಚಿತ್ರದಲ್ಲಿ ರಚಿಸಿದ ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು, ಈ ಗೀತೆಯು ಗಳಿಸಿದ ಜನಪ್ರಿಯತೆಯನ್ನು ಆಗಲಿ ಅಥವಾ ಈ ಗೀತೆಯನ್ನಾಗಲಿ ಕನ್ನಡಿಗರಾದ ನಾವು ಮರೆಯಲು ಸಾಧ್ಯವಿಲ್ಲ.
( ಮುಂದುವರೆಯುವುದು )