ವೀರ ಕೇಸರಿ, ಕನ್ಯಾಧನ, ಜಗನ್ಮೋಹಿನಿ, ಅಗ್ಗಿ ಭರಾಟಾ ಈ ರೀತಿಯ ಪೌರಾಣಿಕ ಅಥವಾ ಜನಪದ ಚಿತ್ರಗಳನ್ನು ನೋಡಿದ ತಕ್ಷಣ ಮೊದಲು ಚಿತ್ರ ಪ್ರೇಮಿಗಳಿಗೆ ಮಾಂತ್ರಿಕ ಚಿತ್ರಗಳ ರಾಜ ಎಂದು ಪ್ರಸಿದ್ಧಿಯನ್ನು ಪಡೆದಿದ್ದ ನಿರ್ದೇಶಕ ಬಿ. ವಿಠ್ಠಲಾಚಾರ್ಯರ ಹೆಸರೇ ನೆನಪಿಗೆ ಬರುತ್ತದೆ. ಅದರಲ್ಲೂ ಆಧುನಿಕ ತಂತ್ರಜ್ಞಾನ ಇರದ ಕಾಲದಲ್ಲಿ ಇವರು ಮಾಂತ್ರಿಕ ಚಿತ್ರಗಳನ್ನು ಚಿತ್ರಿಸುತ್ತಿದ್ದ ರೀತಿಯನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ.
1920, ಜನೆವರಿ 20 ರಂದು ಉಡುಪಿ ಬಳಿಯ ಉದ್ಯಾವರದಲ್ಲಿ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ದಂಪತಿಗೆ ಏಳನೇ ಮಗುವಾಗಿ ಜನಿಸಿದ ಇವರು ಚಿಕ್ಕ ವಯಸ್ಸಿನಿಂದಲೇ ನಾಟಕ, ಬಯಲಾಟ ಮತ್ತು ಯಕ್ಷಗಾನಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ಇವರ ತಂದೆ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದರಲ್ಲದೆ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಕೊಡುತ್ತಿದ್ದರು. ಕೇವಲ ಮೂರನೇ ತರಗತಿಯವರೆಗೆ ಮಾತ್ರ ಶಿಕ್ಷಣವನ್ನು ಪಡೆದಿದ್ದ ಇವರು ಚಿಕ್ಕ ವಯಸ್ಸಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮನೆಯನ್ನು ತೊರೆದು ಬಂದು ಹಲವಾರು ಕೆಲಸಗಳನ್ನು ನಿರ್ವಹಿಸುತ್ತ ಬದುಕಿನ ಶಿಕ್ಷಣವನ್ನು ಪಡೆದಿದ್ದರು. ಹಲವಾರು ಕೆಲಸಗಳನ್ನು ನಿರ್ವಹಿಸಿ ಅಪಾರ ಅನುಭವವನ್ನು ಪಡೆದಿದ್ದ ಇವರು ತಮ್ಮ ಸಂಬಂಧಿಕನಿಂದ ಉಡುಪಿ ಹೋಟೆಲ್ ನ್ನು ಖರೀದಿಸಿ ಯಶಸ್ವಿಯಾಗಿ ಮುನ್ನಡೆಸಿದ್ದರು.
ಇದೇ ಸಮಯದಲ್ಲಿ ನಮ್ಮ ದೇಶದಲ್ಲಿ ಬ್ರಿಟೀಷ್ ಸರ್ಕಾರದ ವಿರುದ್ಧ ಭಾರತ ಬಿಟ್ಟು ತೊಲಗಿ ಚಳುವಳಿಯು ನಡೆದಿತ್ತು. ತಮ್ಮ ಸ್ನೇಹಿತರೊಡನೆ ಈ ಚಳುವಳಿಯಲ್ಲಿ ಭಾಗವಹಿಸಿದ ಪರಿಣಾಮ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿತ್ತು. ಆದರೆ ಜೈಲಿನಿಂದ ಹೊರಬಂದ ನಂತರ ಇವರು ತಮ್ಮ ಹೋಟೆಲ್ ಉದ್ಯಮವನ್ನು ಕಿರಿಯ ಸಹೋದರನಿಗೆ ಹಸ್ತಾಂತರಿಸಿ ಆಪ್ತ ಸ್ನೇಹಿತ ಡಿ.ಶಂಕರ್ ಸಿಂಗ್ ಮತ್ತು ಗೆಳೆಯರ ಜೊತೆ ಹಾಸನ ಜಿಲ್ಲೆಗೆ ಆಗಮಿಸಿ ಅಲ್ಲಿಯೇ ಒಂದು ಟೂರಿಂಗ್ ಟಾಕೀಸ್ ನ್ನು ಸ್ಥಾಪಿಸಿದ್ದರು. ಅಷ್ಟೇ ಅಲ್ಲದೆ ಒಂದು ಟೂರಿಂಗ್ ಟಾಕೀಸ್ ನ್ನು ನಾಲ್ಕು ಆಗಿ ಬೆಳೆಸಿದ್ದರಲ್ಲದೆ ಪ್ರದರ್ಶಿಸಲ್ಪಡುತ್ತಿದ್ದ ಪ್ರತಿ ಚಿತ್ರವನ್ನು ನೋಡಿ ಗಮನಿಸಿ ಚಿತ್ರಗಳ ತಯಾರಿಕೆಯ ಪ್ರತಿ ತಂತ್ರವನ್ನು ಕಲಿತುಕೊಂಡಿದ್ದರಲ್ಲದೆ ಇದೇ ಸಮಯದಲ್ಲಿ 1944 ರಲ್ಲಿ ತಮ್ಮ 24 ನೇ ವಯಸ್ಸಿನಲ್ಲಿ ಕೆ.ಆರ್.ಪೇಟೆಯ ರಾಮದಾಸ ಆಚಾರ್ಯರ ಮೂರನೇ ಮಗಳಾದ ಜಯಲಕ್ಷ್ಮಿಯನ್ನು ವಿವಾಹವಾದರು. ಇದೇ ಗೆಳೆಯರೊಂದಿಗೆ ಮೈಸೂರಿಗೆ ತೆರಳಿ ಅಲ್ಲಿಯೇ ಮಹಾತ್ಮ ಪಿಕ್ಚರ್ಸ್ ಹೆಸರಿನಲ್ಲಿ ಚಿತ್ರ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದ್ದರು. ಇಲ್ಲಿ ಆರಂಭವಾದ ಇವರ ಮೋಡಿಯ ಪರಿಣಾಮ 1944 ರಿಂದ 1953 ರ ಒಂಬತ್ತು ವರ್ಷಗಳ ಅವಧಿಯಲ್ಲಿ 18 ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದರು. ಪ್ರತಿ ಚಿತ್ರದಲ್ಲಿಯು ದೊರಕಿದ ಯಶಸ್ಸು ಅದರಲ್ಲೂ ನಾಗಕನ್ಯಾ, ಶ್ರೀನಿವಾಸ ಕಲ್ಯಾಣ ಚಿತ್ರದ ಯಶಸ್ಸನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಆಧುನಿಕ ತಂತ್ರಜ್ಞಾನದ ಯಾವುದೇ ಸೌಲಭ್ಯವೇ ಇರದ ಕಾಲದಲ್ಲಿ ಇವರು ಮಾಂತ್ರಿಕ ಚಿತ್ರಗಳನ್ನು ಚಿತ್ರಿಸುತ್ತಿದ್ದ ರೀತಿ ಎಂತಹವರಿಗಾದರೂ ಬೆರಗು ಮೂಡಿಸುತ್ತದೆ. ಇದ್ದಕ್ಕಿದ್ದಂತೆ ಮಾಯವಾಗುವ ದೃಶ್ಯ, ಆಕಾಶದಲ್ಲಿ ಸಂಚರಿಸುವ ದೃಶ್ಯ, ರುಂಡಗಳ ಚಲನೆಯ ದೃಶ್ಯ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ದೇವರು, ಅಬ್ಬರಿಸುವ ದೈತ್ಯರು ಇತ್ಯಾದಿ ಈ ರೀತಿಯ ದೃಶ್ಯಗಳು ಆಗಿನ ಕಾಲದ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತಿತ್ತು. ಅಲ್ಲದೇ ಚಿಕ್ಕ ಮಕ್ಕಳು ಭಯ ಪಟ್ಟಂತಹ ಸಂಗತಿಗಳು ಕೂಡ ಇದ್ದವು. ಈ ರೀತಿ ತಮ್ಮ ಚತುರತೆಯಿಂದ ಆ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದ್ದರು.
ಮುಂದುವರಿಯುವುದು……..