ಮಹಾರಾಜ ಕೆ ಎಸ್ ಅಶ್ವತ್ಥ್ ಜ್ಯೋತಿಷ್ಯ ಬಲ್ಲ ಹಿತ್ತಾಳೆ ಕಿವಿಯ ರಾಜ. ಆತನ ಬಳಿ ಒಂದು ಖಡ್ಗ ಇರುತ್ತದೆ. ಅದನ್ನು ಒಂದೆಡೆ ಗೋಡೆಯಲ್ಲಿ ಸಿಗಿಸಿ ಕೇವಲ ತನ್ನ ಮಗ ಅದೂ ನ್ಯಾಯವಾಗಿದ್ದರೆ ಮಾತ್ರ ಹೊರಗೆಳೆಯಬಹುದು ಎಂದಿರುತ್ತಾನೆ.
ಜ್ಯೋತಿಷ್ಯದ ಪ್ರಕಾರ ತನಗೆ ಹೆಣ್ಣು ಮಗು ಎಂದುಕೊಂಡಾಗ ಆದಿತ್ಯ (ರಾಜ್ಕುಮಾರ್) ಎಂಬ ಗಂಡು ಮಗು ಆಗುತ್ತದೆ. ಅಣ್ಣನ ಸಿಂಹಾಸನದ ಮೇಲೆ ಕಣ್ಣು ಇಟ್ಟಿರುವ ತಮ್ಮನ (ಎಂ ಪಿ ಶಂಕರ್) ಮಾತುಗಳಿಗೆ ಕಿವಿಗೊಟ್ಟು ತನ್ನ ಪತ್ನಿಗೂ (ಎಂ ವಿ ರಾಜಮ್ಮ) ತನ್ನ ಸುಬುದ್ಧಿಯ ಮಂತ್ರಿಗೂ ಹುಟ್ಟಿದ ಅನೈತಿಕ ಮಗ ಎಂದು ನಂಬಿ ಮಂತ್ರಿಯನ್ನು ಜೈಲಿಗೆ ಹೆಂಡತಿ ಮತ್ತು ಅವಳ ಮಗನನ್ನು ಕಾಡಿಗೆ ಅಟ್ಟುತ್ತಾನೆ. ಗುರುವೊಬ್ಬ ಆದಿತ್ಯನಿಗೆ 64 ವಿದ್ಯೆಗಳನ್ನೂ ಕಳಿಸುತ್ತಾನೆ.
ಮಹಾರಾಜ ತನ್ನ ತಂಗಿಯ ಮಗಳು ಯಾಮಿನಿಯನ್ನು (ಬೆಡಗಿನ ನಟಿ ಭಾರತಿ) ಕರೆಸುತ್ತಾನೆ. ಹೇಗೆ ದುಷ್ಟಕೂಟವನ್ನು ಆದಿತ್ಯ ಸದೆಬಡಿದು ಅಮ್ಮನ ಕಳಂಕ ಅಳಿಸಿ, ಅಪ್ಪನಿಗೆ ನಂಬಿಕೆ ಉಂಟು ಮಾಡಿ… ಇದು ಕಥೆ.
ಒಳಗಿನ ಆಸೆ… ಪಿಬಿಎಸ್ ಹಾಡು ನೆನಪಿದ್ದ ಹಾಡು. ಎಲ್ ಆರ್ ಈಶ್ವರಿ ಹಾಡಿರುವ ಏರಿ ಮೇಲೆ ಏರಿ ಹಾಡಲ್ಲಿ ಎಸ್ ಪಿಬಿ ಛದ್ಮವೇಷದ ಅಣ್ಣಾವ್ರಿಗೆ ವಾಯ್ಸ್ ಕೊಟ್ಟಿದ್ದಾರೆ.
ನರಸಿಂಹರಾಜು, ಬಿ ಜಯಾ, ಶಕ್ತಿಪ್ರಸಾದ್, ರಾಮಚಂದ್ರ ಶಾಸ್ತ್ರಿ ಗುರುತಿಸಲ್ಪಟ್ಟ ಮುಖಗಳು.
ಅಣ್ಣಾವ್ರು ಲೀಲಾಜಾಲವಾಗಿ ಕತ್ತಿ ಫೈಟು, ಕೈ ಕೈ ಫೈಟು ಮಾಡಿದ್ದಾರೆ. ಬಹದ್ದೂರ್ ಗಂಡು ನೆನಪಿಸುವ ವೇಷ. ಥೈಥೈ ಎಂದು ಕುಣಿದು ಹಾಡಿ ಭಾರತಿಯಿಂದ ಕತ್ತಿ ಚುಚ್ಚುವಿಕೆ ತಪ್ಪಿಸಿಕೊಳ್ಳುವ ಹಾಡು ನೋಡಲು ಚಂದ. ಸೈರಂಧ್ರಿಯಂತೆ ವೇಷ ಧರಿಸಿದ ಭೀಮನನ್ನು ನೆನಪಿಸುವ ದೃಶ್ಯ ಇದೆ. ಲಂಗ ದಾವಣಿ ರವಿಕೆಯಲ್ಲಿ ವಸ್ತ್ರಾಪಹರಣಕ್ಕೆ ಒಳಗಾಗಿ ಕುಡುಕ ಎಂ ಪಿ ಶಂಕರನನ್ನು ಆಟವಾಡಿಸೋ ದೃಶ್ಯವನ್ನು ಅವರೂ ಎಂಜಾಯ್ ಮಾಡಿ ನಟಿಸಿದ್ದಾರೆ. ನಮಗೂ ಮಜಾ ಕೊಡುವ ದೃಶ್ಯ.
ಅಮ್ಮನ ಸೆಂಟಿಮೆಂಟ್ಸ್ ಇವೆ. ಕಬ್ಬಿಣದ ಸರಪಳಿ ಕಿತ್ತು ಆದಿತ್ಯ ಬಂಧಮುಕ್ತ ಆಗುವ ದೃಶ್ಯ ಇದೆ.