ಸಾಮಾನ್ಯವಾಗಿ ಯಾರಾದರೂ ದುಷ್ಟರು ನಮ್ಮ ಜೀವನವನ್ನು ಪ್ರವೇಶಿಸಿದರೆ, ಧೂಮಕೇತುವಿನಂತೆ ಬಂದರು ನಮ್ಮ ಬಾಳಲ್ಲಿ ಎಂದುಕೊಳ್ಳುತ್ತೇವೆ. 1968ರ ಈ ಚಿತ್ರದಲ್ಲಿ ಮುಖ್ಯ ಖಳ ಡಿಸೌಜಾ (ಉದಯಕುಮಾರ್) ಬಹಳ ಹೆಮ್ಮೆಯಿಂದ ತನ್ನನ್ನು ತಾನು ಧೂಮಕೇತು ಎಂದುಕೊಳ್ಳುತ್ತಾನೆ!
ಅವನೂ ಅವನ ಆರು ಜನ ಶಿಷ್ಯರು ಬ್ಯಾಂಕಿನಿಂದ ಹಣ ತರುತ್ತಿದ್ದ ಬಡಪಾಯಿಯೊಬ್ಬನಿಂದ ಹಣ ಅಪಹರಿಸುತ್ತಾರೆ. ಅದರಲ್ಲಿ ಮೂರು ಜನ (ನಾಗಪ್ಪ+ ಇಬ್ಬರು) ಡಿಸೌಜಾಗೆ ಡಬಲ್ಕ್ರಾಸ್ ಮಾಡಿ ಆ ಹಣವನ್ನು ಲಪಟಾಯಿಸಿ ಕಣ್ಮರೆಯಾಗುತ್ತಾರೆ.
ಚಿರತೆ ಮುಂತಾದ ಕಾಡುಪ್ರಾಣಿಗಳನ್ನು ಬೇಟೆಯಾಡುವ ಪ್ಲೇಬಾಯ್ ಕುಮಾರ್ (ರಾಜ್ಕುಮಾರ್) ಡಿಸೌಜಾನ ಬಲೆಗೆ ಸಿಕ್ಕಿ ಬೀಳುತ್ತಾನೆ. ಅವನಿಂದ ತಪ್ಪಿಸಿಕೊಳ್ಳುವುದೇ ಈ ಧೂಮಕೇತು ಕಥೆ.
ಕುಮಾರ್ಗೆ ಶೀಲಾ (ಉದಯಚಂದ್ರಿಕಾ) ಎಂಬ ಗೆಳತಿ, ಪಟ್ಟಾಭಿ (ನರಸಿಂಹರಾಜು) ಎಂಬ ವಿಜ್ಞಾನಿ ಗೆಳೆಯ ಇರುತ್ತಾರೆ. ಶೈಲಶ್ರೀ ಸಿ.ಐ.ಡಿ.ಯಾಗಿದ್ದು ಕ್ಲಬ್ನಲ್ಲಿ ಎಲ್ ಆರ್ ಈಶ್ವರಿ ಧ್ವನಿಯಲ್ಲಿ ‘ಒಂದು ತಾ ಇಂದು ತಾ’ ಎಂದು ಹಾಡಿ ಕುಣಿಯುತ್ತಾಳೆ.
ಮಿಕ್ಕ ಮೂವರು ಖದೀಮರಲ್ಲಿ ಶಕ್ತಿಪ್ರಸಾದ್ ಗುರುತು ಸಿಕ್ಕಿತು. ನಟ ಸಂಪತ್, ಕುಮಾರ್ನ ತಂದೆಯ ಸೆಕ್ರೆಟರಿ. ಕೆ.ಎಸ್.ಅಶ್ವತ್ಥ್ ಕಮಿಷನರ್. ಆತನ ತಮ್ಮನ ಮಗ ಕುಮಾರ್. ಕಮಿಷನರ್ ಕೊಲೆಯಾಗಿ ಅದರ ಆಪಾದನೆ ಕುಮಾರ್ ಮೇಲೆ ಬರುವಂತೆ ಡಿಸೌಜಾ ಹುನ್ನಾರ ಮಾಡುತ್ತಾನೆ. ರಂಗ ಇನ್ಸ್ಪೆಕ್ಟರ್. ಕಮಿಷನರ್ ಕೊಲೆಗಾರನ ಪತ್ತೆಗೆ ನಿಯೋಜಿಸಲ್ಪಟ್ಟಿರುತ್ತಾನೆ.
ಪಿ. ಸುಶೀಲಾ ದನಿಯಲ್ಲಿ ಒಂದು ಹಾಡು ಅಹಾ ಅಹಾ ಇದೇನು ನಡೆ. ಪಿ.ಬಿ.ಎಸ್. ಕೂಡ ಇದನ್ನು ಬೇರೆಯಾಗಿ ಹಾಡಿದ್ದಾರೆ.
ಪ್ರಭಾತ್ ಸರ್ಕಸ್ನ ದರ್ಶನ ಮಾಡಬಹುದು. ಈಗೆಲ್ಲಾ ಸರ್ಕಸ್ನಲ್ಲಿ ಇಷ್ಟೊಂದು ಪ್ರಾಣಿಗಳಿಲ್ಲವೇ ಇಲ್ಲ. ಕರಡಿ ಮೊಪೆಡ್ ಓಡಿಸೋದು ವಿಶೇಷ ಎನ್ನಿಸಿತು. ಸರ್ಕಸ್ನಲ್ಲಿ ‘ರಂಗು ರಂಗಿನಾಟ ಈ ಬೆಳಕಿನ ಚೆಲ್ಲಾಟ’ ಹಾಡು ಪಿ.ಸುಶೀಲಾ ದನಿಯಲ್ಲಿದೆ.
ರಾಜ್ಕುಮಾರ್ ಟ್ರಿಮ್… ವೆರಿ ಟ್ರಿಮ್. ತುಂಟತನದ ನಟನೆಯಿದೆ. ನೋಡಲು ಬಹಳ ಬಹಳ ಅಂದವಾಗಿದ್ದಾರೆ. ಸಲೀಸಾಗಿ ನಟಿಸಿ, ಕುಣಿದು, ಪ್ರೇಮಿಸಿ, ಫೈಟ್ ಮಾಡಿದ್ದಾರೆ.
ಸುಮಾರು 177 ನಿಮಿಷಗಳ ಸಿನಿಮಾ ಈ ಧೂಮಕೇತು.