ಕನ್ನಡ ಚಿತ್ರರಂಗದ ಹಾಸ್ಯ ಖಳ ನಟ ದಿನೇಶ್

  ದಿನೇಶ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾನ್ವಿತ ಹಾಸ್ಯ ಖಳ ನಟ. ಇವರ ಅಭಿನಯದ ನಮ್ಮೂರ ಹಮ್ಮೀರ ಚಿತ್ರದಲ್ಲಿ ಇರುಳುಗುರುಡತನದ ಹಾಸ್ಯ ಪಾತ್ರವನ್ನು ಯಾರಿಗಾದರೂ ಮರೆಯಲು ಸಾಧ್ಯವೇ? ಆದರೆ ಖಳನಾಯಕನ ಪಾತ್ರಕ್ಕೆ ಒಂದು ವಿಶಿಷ್ಟ ಮೆರುಗು, ಪ್ರತಿಷ್ಟೆ ನೀಡಿದ ನಟ ಎಂದು ಹೇಳಿದರೆ ತಪ್ಪಾಗಲಾರದು.

      ಕನ್ನಡ ಚಿತ್ರರಂಗದ ಹಾಸ್ಯ ನಟ ದಿನೇಶ್ ರವರು ಜನೆವರಿ ೨೫, ೧೯೩೦ ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ಬೆಂಗಳೂರಿನಲ್ಲಿಯೇ ತಮ್ಮ ಶಿಕ್ಷಣವನ್ನು ಪಡೆದಿದ್ದರು. ಮೊದಲು ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡೆದ ಇವರು ಕೆಲವು ವರ್ಷಗಳ ಕಾಲ ಪ್ರೌಢ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಮಾಡಿದ್ದರು. ೧೯೫೨ ರಲ್ಲಿ ಜ್ಞಾನ ಜ್ಯೋತಿ ಕಲಾಮಂದಿರ, ಫ್ರೆಂಡ್ಸ್ ಯುನಿಯನ್ ಮೊದಲಾದ ಹವ್ಯಾಸಿ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದರು.

ಹವ್ಯಾಸಿ ನಾಟಕ ರಂಗದಲ್ಲಿ  ಹಲವಾರು ಪಾತ್ರಗಳನ್ನು ನಿರ್ವಹಿಸಿ ಜನರ ಮನಸ್ಸು  ಗೆದ್ದಿದ್ದರಿಂದ  ಇವರ ಮನಸ್ಸು ರಂಗ ಭೂಮಿಯ ಕಡೆ ತಿರುಗಿತು. ಪ್ರಮುಖ ರಂಗ ಕರ್ಮಿ ಗುಬ್ಬಿ ವೀರಣ್ಣ ಮತ್ತು ಜಯಮ್ಮ ದಂಪತಿಗಳಿಂದ ದೊರೆತ ಸಹಕಾರ, ಪ್ರೀತಿ ಗೌರವದಿಂದ  ೧೯೫೬ ರಲ್ಲಿ ಶ್ರೀ ಗುಬ್ಬಿ ಚನ್ನಬಸವೇಶ್ವರ ನಾಟ್ಯ ಸಂಘವನ್ನು ಪ್ರವೇಶಿಸಿ ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುವುದರ ಮೂಲಕ ತಮ್ಮ ರಂಗಭೂಮಿಯ ಜೀವನ ಆರಂಭಿಸಿದ ಇವರು ನಂತರ ಸಾಹುಕಾರ, ಅಣ್ಣ ತಮ್ಮ ಮತ್ತು ಕುರುಕ್ಷೇತ್ರ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವುದರ ಮೂಲಕ ಬಹಳ ಬೇಗ ಜನಪ್ರಿಯ ನಟರಾಗಿದ್ದರು.

ಕೆಲವು ತಿಂಗಳುಗಳ  ನಂತರ  ಮೈಸೂರಿನ ಲಕ್ಷ್ಮಿ ನರಸಿಂಹ ಸ್ವಾಮಿ  ಥೇಟರಿನಲ್ಲಿ ಹಾಸ್ಯ ನಾಟಕಕಾರ ಮಾಸ್ಟರ್ ಹಿರಣ್ಣಯ್ಯನವರೊಂದಿಗೆ ಲಂಚಾವತಾರ, ಮಕ್ಮಲ್ ಟೋಪಿ ಮತ್ತು ದೇವದಾಸಿಯಂತಹ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಕೆಲವು ತಿಂಗಳುಗಳ ನಂತರ ಉಮಾ ಮಹೇಶ್ವರ ನಾಟ್ಯ ಸಂಘವನ್ನು ಪ್ರವೇಶಿಸಿ ಕೆಲವು ಕಾಲ ಹೊನ್ನಪ್ಪ ಭಾಗವತರ ಜೊತೆ ರಾಮಾಯಣ, ಬಸವೇಶ್ವರ ಮತ್ತು ಬ್ರೋಕರ್ ಭೀಷ್ಭಾಚಾರಿಯಂತಹ ಅನೇಕ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದರು.

ಆದರೆ ಕಾರಣಾಂತರಗಳಿಂದ ಇವರು ಉಮಾ ಮಹೇಶ್ವರ ನಾಟ್ಯ ಸಂಘವನ್ನು ತ್ಯಜಿಸಿ ಬಳ್ಳಾರಿ ಲಲಿತಕಲಾ ಸಂಘದ ನಾಟಕ ಕಂಪನಿಯನ್ನು ಪ್ರವೇಶಿಸಿ ಮದುವೆ ಮಾರ್ಕೆಟ್, ಟಿಪ್ಪು ಸುಲ್ತಾನ್ ಮತ್ತು ಎಚ್ಚಮ್ಮ ನಾಯಕದಂತಹ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಈ ರೀತಿಯಾಗಿ ತಮ್ಮ ಏಳು ವರ್ಷಗಳ ರಂಗ ಭೂಮಿಯ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿ ಅಪಾರ ಅನುಭವದೊಂದಿಗೆ  ೧೯೬೪ ರಲ್ಲಿ ನಾಂದಿ ಚಿತ್ರದಲ್ಲಿ ಉಪಾಧ್ಯಾಯನ ಪಾತ್ರವನ್ನು ನಿರ್ವಹಿಸುವುದರ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದರು.

ಅನಂತರ ಸಿ.ಐ.ಡಿ ರಾಜಣ್ಣ ಚಿತ್ರದಲ್ಲಿ ಖಳ ನಾಯಕನ ಪಾತ್ರವನ್ನು ನಿರ್ವಹಿಸುವುದರೊಂದಿಗೆ ಭೂತಯ್ಯನ ಮಗ ಅಯ್ಯು, ಸಿ.ಬಿ.ಐ. ಶಂಕರ್, ನಮ್ಮೂರ ಹಮ್ಮೀರ, ಸೀತಾರಾಮು ಮತ್ತು ಮೇಯರ್ ಮುತ್ತಣ್ಣ ಸೇರಿದಂತೆ ಇತರೆ ಚಿತ್ರಗಳಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳು ಸೇರಿ ೨೬೦  ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಚಿತ್ರ ರಂಗದಲ್ಲಿ ಖಳನಾಯಕನ ಪಾತ್ರಕ್ಕೆ ಒಂದು ವಿಶಿಷ್ಟ ಮೆರುಗು, ಪ್ರತಿಷ್ಟೆ ತಂದ ಕೀರ್ತಿ ಇವರದ್ದಾಗಿದೆ.

ಚಿತ್ರ ರಂಗದಲ್ಲಿ ನಿರಂತರವಾಗಿ ಚಿತ್ರಗಳಲ್ಲಿ ಅಭಿನಯಿಸುವ ಕೆಲಸದ ಒತ್ತಡ ಹೆಚ್ಚಿದ್ಥರು ಕೂಡ ತಮ್ಮ ಜೀವನಕ್ಕೆ ಒಂದು ಭದ್ರವಾದ ನೆಲೆಯನ್ನು ಕೊಟ್ಟ ರಂಗ ಭೂಮಿಯನ್ನು ಕಡೆಗಣಿಸದೇ ಸಮಯದ ಅಭಾವದ ಇದ್ದ ಕಾರಣ  ಕಡಿಮೆ ನಾಟಕಗಳಲ್ಲಿ ಅಭಿನಯಿಸಿದ್ದರು. ಈ ರೀತಿಯಾಗಿ ತಮ್ಮ ೩೪ ವರ್ಷಗಳ ರಂಗಭೂಮಿ ಮತ್ತು ಚಿತ್ರ ರಂಗದ ಜೀವನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದ ಇವರು ಎಪ್ರಿಲ್ ೨೬, ೧೯೯೦ ರಂದು ತಮ್ಮ ೫೨ ನೇ ವಯಸ್ಸಿನಲ್ಲಿ ಮರಣ ಹೊಂದಿದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply