ಅರವಿಂದ್ ಬೋಳಾರ್ ತುಳು ಚಿತ್ರ ರಂಗ ಕಂಡ ಒಬ್ಬ ಮೇರು ಹಾಸ್ಯ ಕಲಾವಿದ ಮಾತ್ರವಲ್ಲದೆ ಯಕ್ಷಗಾನದಲ್ಲಿಯೂ ಕೂಡ ಪ್ರಮುಖ ಕಲಾವಿದರಾಗಿರುವ ಇವರನ್ನು ತುಳು ಚಿತ್ರರಂಗದಲ್ಲಿ ತುಳು ನಾಡ ಮಾಣಿಕ್ಯ ಎಂದೇ ಗುರುತಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ನಲ್ಲಿ ಕೃಷ್ಣಪ್ಪ ಮತ್ತು ಸುಂದರಿ ಎಂಬ ದಂಪತಿಯ ಮಗನಾಗಿ ಜನಿಸಿದ ಇವರು ತಮ್ಮ ಜೀವನದಲ್ಲಿ ಚಿತ್ರ ನಟನಾಗಬೇಕೆಂದು ಎಂದು ಕನಸು ಕಂಡವರಲ್ಲ. ಆದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವನ್ನು ಹೊಂದಿದ್ದ ಇವರನ್ನು ಮೊದಲ ಬಾರಿಗೆ ಕರಾವಳಿಯ ನಾಟಕ ರಂಗವು ಸ್ವಾಗತಿಸಿತು.ಇಲ್ಲಿ ಆರಂಭವಾದ ರಂಗ ಭೂಮಿಯ ಜೀವನದಲ್ಲಿ ಹಲವಾರು ನಾಟಕಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದರು.
ಇವರ ರಂಗ ಭೂಮಿಯ ಜೀವನ ಕೇವಲ ಕರಾವಳಿಗೆ ಸೀಮಿತವಾಗಿರಲಿಲ್ಲ. ತುಳು ನಾಟಕ ರಂಗದವರೆಗೂ ವ್ಯಾಪಿಸಿತಲ್ಲದೆ ಯಕ್ಷಗಾನದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮ ವಿಶಿಷ್ಟ ರೀತಿಯ ಸಾಧನೆಯಿಂದ ಕರಾವಳಿ ನಾಟಕ ರಂಗದಲ್ಲಿ ಮತ್ತು ತುಳು ಚಿತ್ರ ರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ರಂಗ ಭೂಮಿಯ ನಟನೆಯ ಅನುಭವದೊಂದಿಗೆ ಇವರು ೨೦೧೧ ರಲ್ಲಿ ತೆರೆ ಕಂಡ ಒರಿಯರ್ದೋರಿ ಅಸಲ್ ಎಂಬ ತುಳು ಚಿತ್ರದಲ್ಲಿ ನಟಿಸುವುದರ ಮೂಲಕ ತುಳು ಚಿತ್ರ ರಂಗವನ್ನು ಪ್ರವೇಶಿಸಿದರು. ಈ ಚಿತ್ರದಲ್ಲಿ ಇವರು ಕಾರ್ಪರೇಟ್ ಸೇಸಪ್ಪ ಎಂಬ ಪಾತ್ರವನ್ನು ನಿರ್ವಹಿಸಿದರು.
೨೦೧೨ ರಲ್ಲಿ ತೆರೆ ಕಂಡ ತೆಲಿಕೇದ ಬೊಳ್ಳಿ ಚಿತ್ರದಲ್ಲಿ ನಿರ್ವಹಿಸಿದ ಟೈಲರ್ ಭೋಜ ಪಾತ್ರವನ್ನು ಮರೆಯಲು ಸಾಧ್ಯವೇ? ಅದೇ ವರ್ಷ ತೆರೆ ಕಂಡ ಸೋಂಪಾ, ರಿಕ್ಷಾ ಡ್ರೈವರ್, ೨೦೧೩ ರಲ್ಲಿ ಚೆಲ್ಲಾ ಪಿಲ್ಲಿ ಎಂಬ ಕನ್ನಡ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ಕೂಡ ಪ್ರವೇಶಿಸಿದರು. ನಂತರ ೨೦೧೪ ರಲ್ಲಿ ತೆರೆ ಕಂಡ ಗಿರ್ಗಿಟ್ ಎಂಬ ತುಳು ಚಿತ್ರದಲ್ಲಿ ವಕೀಲ ಕೋದಂಡನ ಪಾತ್ರವನ್ನು ನಿರ್ವಹಿಸಿದರು. ಅದೇ ವರ್ಷ ತೆರೆ ಕಂಡ ಆಟಡೋಂಜಿ ದಿನ ಎಂಬ ತುಳು ಚಿತ್ರದಲ್ಲಿ ಹಾಸ್ಯ ಖಳನ ಪಾತ್ರವನ್ನು ನಿರ್ವಹಿಸಿದರು. ಚಿತ್ರರಂಗದಲ್ಲಿ ಬೆರೆಳಣಿಕೆಯ ಚಿತ್ರಗಳಲ್ಲಿ ನಟಿಸಿರುವರು.
ಆದರೆ ರಂಗ ಭೂಮಿಯಲ್ಲಿ ಇವರ ಸಾಧನೆ ಅನನ್ಯವಾದುದರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಾಧನೆ ಶಾರದಾರ್ ಮತ್ತು ತುಳುನಾಡ ಮಾಣಿಕ್ಯ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.