ಕಲಾ ಕುಟುಂಬದ ಯಾವುದೇ ಹಿನ್ನಲೆಯಿಲ್ಲದೇ ಚಿತ್ರರಂಗವನ್ನು ಪ್ರವೇಶಿಸಿ ಅನೇಕ ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿರುವ ನಿರ್ದೇಶಕ ಶಂಕರ್ ಭರವಸೆಯ ನಿರ್ದೇಶಕ ಮಾತ್ರವಲ್ಲ, ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಹಠವಾದಿ ಕೂಡ. ಪ್ರಸ್ತುತ ಆರ್ಟಿಕಲ್ 370 ಎಂಬ ವಿಭಿನ್ನ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಹೊಸ ಅಲೆಯ ಚಿತ್ರಗಳ ನಾಂದಿಗೂ ಕೂಡ ಕಾರಣರಾಗಿರುವ ನಿರ್ದೇಶಕ ಶಂಕರ್ ನಮ್ಮ ಇಂದಿನ ಸೆಲೆಬ್ರಿಟಿ. ಚಿತ್ರೋದ್ಯಮ.ಕಾಂ ತಂಡದ ಸಂದೀಪ್ ಜೋಶಿ ನಡೆಸಿದ ಮಾತುಕತೆ ಇವತ್ತಿನ ಸಂಡೆ ಸ್ಪೆಷಲ್ ಕಾಲಂ ನಲ್ಲಿ.
ಚಿತ್ರೋದ್ಯಮ: ಸರ್ ನಿಮ್ಮ ಚಿತ್ರ ರಂಗದ ಪ್ರವೇಶ ಹೇಗಾಯಿತು?
ನಿರ್ದೇಶಕ ಶಂಕರ್: ಸರ್ ನಾನು ಮೊದಲು 2017 ರಲ್ಲಿ ಮುಕ್ತಿ ಎನ್ನುವ ಸಿನಿಮಾ ಮಾಡಿದೆ, ಅದು ವಿಷಯ ಬಂದು ಧಾರವಾಡ ಜಿಲ್ಲೆಯ ಹನುಮಂತಪ್ಪ ಕೊಪ್ಪದ ಅವರ ಕುರಿತು ಚಿತ್ರ ಮಾಡಿದೆ. ಆಮೇಲೆ ತ್ರಿಪುರ ಎಂಬ ಚಿತ್ರ ಮಾಡಿದೆ, ಅದು 2019 ರಲ್ಲಿ ಮಾಡಿದ್ದು, ಈಗ ಆರ್ಟಿಕಲ್ 370 ಕನ್ನಡದಲ್ಲಿ ಪರಿಚ್ಛೇದ ಎಂದು ಕರೆಯುತ್ತಾರೆ. ಇಲ್ಲಿ ಪರಿಚ್ಛೇದ ಎಂದರೆ ಯಾರಿಗೂ ಅರ್ಥವಾಗುವುದಿಲ್ಲ. ಆರ್ಟಿಕಲ್ 370 ಎಂದು ಹೇಳಿದರೇನೇ ಅರ್ಥವಾಗುತ್ತದೆ.
ಚಿತ್ರೋದ್ಯಮ: ಸರ್ ಒಂದು ಕೊಶ್ಚೆನ್ ಆರ್ಟಿಕಲ್ 370 ಎನ್ನುವ ಹೆಸರಿಗೆ ಅದರದೇ ಆದ ಮಹತ್ವವಿದೆ. ಇಂತಹ ಚಿತ್ರಗಳನ್ನು ಮಾಡುವುದು ಸುಲಭದ ಮಾತಲ್ಲ, ಮುಖ್ಯವಾಗಿ ಧೈರ್ಯವು ಬೇಕು, ಈ ಚಿತ್ರವನ್ನು ಮಾಡಲು ಸ್ಪೂರ್ತಿಯೇನು?
ನಿರ್ದೇಶಕ ಶಂಕರ್: ಸರ್ ಇದು ತುಂಬಾ ಒಳ್ಳೆಯ ಕೊಶ್ಚೆನ್ ಕೇಳಿದ್ದೀರಿ, ನಮ್ಮ ರಾಜ್ಯದ ಕಡೆಯಿಂದ ತಲೆ ನೋವಿನ ಎರಡು ಕಂಟ್ರಿ, ಎರಡು ದೇಶಗಳ ನಡುವಿನ ಕಥೆಯಿದು, ಆದರೆ ಚಿತ್ರದ ದೃಷ್ಟಿಯಿಂದ ಹೆಚ್ಚು ಹೇಳುವುದು ಸರಿಯಲ್ಲ, ಜನ ಚಿತ್ರವನ್ನು ನೋಡಿದರೆ ಗೊತ್ತಾಗುತ್ತೆ.
ಚಿತ್ರೋದ್ಯಮ: ಸರ್ ಇನ್ನೊಂದು ಪ್ರಶ್ನೆ, ಶಶಿಕುಮಾರ್ ಸರ್ ಉತ್ತಮ ಹಿರಿಯ ನಟರು ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಇಮೇಜನ್ನು ಹೊಂದಿದ್ದು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಂತಹ ಅನುಭವಿ ನಟರ ಜೊತೆ ಕೆಲಸ ಮಾಡಿದಾಗ ನಿಮಗೆ ಯಾವ ರೀತಿ ಅನುಭವವಾಯಿತು?
ನಿರ್ದೇಶಕ ಶಂಕರ್: ಸರ್ ನಿಜಕ್ಕೂ ಅದೊಂದು ಅದ್ಭುತ ಅನುಭವ, ಶಶಿಕುಮಾರ್ ಸರ್ ಒಂದು ರೀತಿಯಲ್ಲಿ ಸಕಲಕಲಾವಲ್ಲಭ, ಡ್ಯಾನ್ಸ್ ನಲ್ಲಿ, ಫೈಟ್ಸ್ ನಲ್ಲಿ, ನಟನೆಯಲ್ಲಿ ಅವರನ್ನು ಮೀರಿಸಲು ಆಗುವುದಿಲ್ಲ, ಅಂತಹ ಅನುಭವಿ ನಟ ನಮ್ಮ ಚಿತ್ರದಲ್ಲಿ ಕೆಲಸವನ್ನು ಮಾಡುತ್ತಿರುವುದೇ ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಚಿತ್ರೋದ್ಯಮ: ಸರ್ ಒಂದು ಕಡೆಯ ಪ್ರಶ್ನೆ ನೀವು ಪ್ರೇಕ್ಷಕರಿಗೆ ಏನು ಹೇಳಲು ಇಚ್ಚಿಸುತ್ತೀರಿ?
ನಿರ್ದೇಶಕ ಶಂಕರ್: ಸರ್ ಪ್ರೇಕ್ಷಕರೇ ನಮಗೆ ಎಲ್ಲ, ಅವರು ಇದ್ದರೇನೇ ನಾವು ಇರುತ್ತೇವೆ. ಪ್ರೇಕ್ಷಕರಲ್ಲಿ ನಾನು ಕೇಳಿಕೊಳ್ಳುವುದು ಒಂದೇ, ದಯವಿಟ್ಟು ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಿ, ನಮ್ಮ ಕನ್ನಡ ಚಿತ್ರರಂಗವನ್ನು ಬೆಳೆಸಿ ಪ್ರೋತ್ಸಾಹಿಸಿ.
ಶಂಕರ್ ರವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ,ಆ ಅವಕಾಶಗಳಿಂದ ಅತೀ ದೊಡ್ಡ ಯಶಸ್ಸನ್ನು ಪಡೆಯಲಿ ಎನ್ನುವುದು ಚಿತ್ರೋದ್ಯಮ ತಂಡದ ಹಾರೈಕೆ ಕೂಡ ಆಗಿದೆ.