ಸಿನೆಮಾ ವಿಮರ್ಶೆ : “Joji” (ಮಲಯಾಳಂ)

joji malayalam movie

ಈ ಸಿನೆಮಾ ನೋಡಲು ಸಾಕಷ್ಟು ತಾಳ್ಮೆ ಬೇಕು ಎಂಬಂತಹ ಮಾತುಗಳನ್ನು ಬೇರೆಯವರ ಅಭಿಪ್ರಾಯಗಳಲ್ಲಿ ಓದಿದ್ದೆ. ಆದರೆ ಯಾವುದೇ ಸಿನೆಮಾ ಅಥವಾ ಪುಸ್ತಕವಾಗಲೀ, ನಮಗೆ ರುಚಿಸಬೇಕೆಂದರೆ ನಮಗೂ ಆ ಅನುಭವ ಇರಬೇಕಾದ್ದು ಅವಶ್ಯಕವಾಗಿರುತ್ತದೆ.

ಹೇಗೆಂದರೆ, ಆಗ ತಾನೇ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸಿದ ತಂದೆಗೆ ಮಾತ್ರವೇ, ಶಾಕುಂತಲೆಯ ತವರಿನ ನಿರ್ಗಮನವನ್ನು ಓದಿದಾಗ ಆ ಸಾಹಿತ್ಯ ಕಣ್ಣೀರು ತರಿಸುತ್ತದೆ‌. ಬೇರೆಯವರಿಗೆ ಆ ಭಾಗ ಅಷ್ಟೇನೂ ಭಾವನಾತ್ಮಕವಾಗಿಲ್ಲದಿರಬಹುದು.

ಈ ಸಿನೆಮಾ ಅಂಥಹದ್ದೇ…

ಈ ಸಿನೆಮಾದ ಎಲ್ಲಾ ಪಾತ್ರಗಳಲ್ಲಿಯೂ ಒಂದು ತಣ್ಣನೆಯ ಕ್ರೌರ್ಯ ಅಡಗಿದೆ. ಕೆಲವರು ಅದನ್ನು ಮಾತಿನಲ್ಲಿ ತೋರ್ಪಡಿಸುತ್ತಾರೆ, ಕೆಲವರು ತಮ್ಮ ನಡವಳಿಕೆಯಲ್ಲಿ… ಆದರೆ ನಮ್ಮ ಮುಖ್ಯ ಪಾತ್ರಧಾರಿ “ಜೋಜಿ” ಅದನ್ನು ಕಣ್ಣಿನಲ್ಲಿಯೇ ತೋರಿಸುತ್ತಾನೆ. ಅದೇ ಆತನ ತಾಕತ್ತು.

ಅಪ್ಪನದೊಂದು ದೊಡ್ಡ ಸಾಮ್ರಾಜ್ಯವಿರುತ್ತದೆ ಅಂತಿಟ್ಟುಕೊಳ್ಳಿ. ಅದನ್ನು ಅಪ್ಪನೇ ಖುದ್ದಾಗಿ ಕಟ್ಟಿರುವುದು. ಆ ಶ್ರೀಮಂತ ಸಾಮ್ರಾಜ್ಯದ ನೆರಳಿನಲ್ಲಿ ಆತನ ಮಕ್ಕಳು ಬಿಂದಾಸ್ ಆಗಿ ಯಾವ ಚಿಂತೆಯೂ ಇಲ್ಲದೇ ತಮ್ಮ ಪಾಡಿಗೆ ಇರುತ್ತಾರೆ. ಆದರೆ ಅವರುಗಳಿಗೆ ಚಿಂತೆ ಶುರುವಾಗೋದು ಆ ಆಲದ ಮರದಂತಹಾ ಅಪ್ಪ ಇದ್ದಕ್ಕಿದ್ದಂತೆ ಸ್ಟ್ರೋಕ್ ಹೊಡೆದು ಆಸ್ಪತ್ರೆ ಸೇರುವಂತಾದಾಗ….

ಇಂತಹಾ ಅಪ್ಪನಿಗೆ ಒಬ್ಬ ನಾಲಾಯಕ್ ಮಗನಿರುತ್ತಾನೆ.

ಇಂಜಿನೀಯರಿಂಗ್ ಡ್ರಾಪ್ ಔಟ್ ಆತ. ಮಾಡಲೇನೂ ಕೆಲಸವಿಲ್ಲ. ತಿನ್ನುವುದು, ಹಗಲು ಹೊತ್ತಿನಲ್ಲಿಯೂ ಮಲಗುವುದು, ಆಗಾಗ ಬೇರೆಯವರು ಮಾಡಿದ ತಪ್ಪಿಗೆ ಅಪ್ಪನಿಂದ ಒದೆ ತಿನ್ನುವುದು ಬಿಟ್ರೆ ಬೇರೆ ಕೆಲಸವೂ ಇಲ್ಲ, ಯೋಚನೆಯೂ ಇಲ್ಲ ಆತನಿಗೆ. ತನ್ನ ಸ್ಥಿತಿ ಬದಲಾಗಬಹುದು ಎಂಬ ಆಶಾವಾದವೂ ಇಲ್ಲ. ಕೊನೆಯವರೆಗೂ ಹೀಗೇ ಇರುವುದೇ ತನ್ನ ಹಣೇಬರಹ ಎಂದುಕೊಂಡಿರುತ್ತಾನೆ.

ಅಂಥವನಿಗೆ ತಮ್ಮ ತಂದೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದಾಗ ಏನೋ ಆಶಾವಾದ ಬೆಳೆಯುತ್ತದೆ. ಉಳಿದ ಮಕ್ಕಳಿಗೂ ಅಷ್ಟೇ…. ಅಪ್ಪನ ಕಾಲ ಇನ್ನು ಮುಗಿಯಿತು, ಇನ್ನೇನಿದ್ರೂ ಈ ಆಸ್ತಿ ತಮ್ಮದೇ, ಇನ್ಮುಂದೆ ತಮ್ಮದೇ ಕಾಲ ಎಂದುಕೊಳ್ಳುತ್ತಾರೆ. ಸಾಮಾನ್ಯವಾದ ಆಲೋಚನೆ ಅಲ್ಲವೇ? ಜನಸಾಮಾನ್ಯರೆಲ್ಲರೂ ಹೀಗೆಯೇ ಯೋಚಿಸುವುದು.

ಒಮ್ಮೊಮ್ಮೆ ಇಂಥವುಗಳನ್ನು ನೋಡಿದಾಗ ಅನ್ನಿಸುತ್ತದೆ…. ಎಷ್ಟು ಹಣವಿದ್ದರೇನು? ಶ್ರೀಮಂತಿಕೆ ಇದ್ದರೇನು? ಸ್ವಂತ ಮಕ್ಕಳೂ ಸಹ ದುಡ್ಡಿಗೆ ಮರ್ಯಾದೆ ಕೊಡುವಾಗ? ತಂದೆಗೆ ತನ್ನ ಸಾಮ್ರಾಜ್ಯ ಬಿಟ್ಟುಕೊಡುವ ಆಸೆಯಿಲ್ಲ. ಏಕೆಂದರೆ ಅದನ್ನು ಆತನೇ ಕಟ್ಟಿರುವುದು. ಮೋಹ ಅಂತೂ ಇದ್ದೇ ಇರುತ್ತಲ್ಲ. ಆದರೆ ಮಕ್ಕಳಿಗೆ ಈ ಎಮೋಷನ್ಸ್ ಬೇಕಿಲ್ಲ. ಅವರಿಗೆ ಆದಷ್ಟು ಬೇಗ ಅಪ್ಪ ನೇಪಥ್ಯಕ್ಕೆ ಸರಿದು ತಾವು ಚುಕ್ಕಾಣಿ ಹಿಡಿಯಬೇಕು.

ಆದರೆ ಅಂದುಕೊಂಡಂತೆಲ್ಲ ಆಗಬೇಕಲ್ಲ?

ಅಪ್ಪ ಹುಷಾರಾಗಿ ಬಂದೇ ಬಿಡುತ್ತಾರೆ. ಕೈಗೆ ಬಂದ ತುತ್ತು ಬಾಯಿಗೆ ಬಂದಂತೆ ಆಗಲಿಲ್ಲ. ಅಪ್ಪ ಹೋಗ್ಬಿಟ್ರೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅಂದುಕೊಂಡಿದ್ದವರೆಲ್ಲಾ ಈಗ ಬಾಯಿಗೆ ಬೀಗ ಹಾಕಿಕೊಂಡು ಕೂರುತ್ತಾರೆ. ಅಪ್ಪ ಎಷ್ಟು ಸುಧಾರಿಸಿಕೊಳ್ಳುತ್ತಾರೆಂದರೆ ತಾವಾಗಿಯೇ ತಪ್ಪಿಲ್ಲದೆ ಸೈನ್ ಮಾಡುವಷ್ಟು !!!!

ಇದು ಕುಟುಂಬದ ಕೆಲವರನ್ನು ನಿರಾಸೆಗೆ ದೂಡುತ್ತದೆ.

ಆದರೆ ನಿರಾಸೆಯಾದರೂ ಸಹಿಸಿಕೊಳ್ಳಲೇಬೇಕು. ಇನ್ನು ಅಪ್ಪ ಬದುಕಿರುವ ತನಕವೂ ಮತ್ತದೇ ಹಳೆಯ ಜೀವನ, ಏನೇನೂ ಬದಲಾವಣೆಯಿಲ್ಲ ಅಂತ ಎಲ್ಲರೂ ಒಪ್ಪಿಕೊಂಡು ಮುಂದುವರೆಯುತ್ತಾರೆ‌. ಆದರೆ ಈ ಹುಡುಗ “ಜೋಜಿ”ಗೆ ಹಾಗೆ ಇರಲಾಗೋಲ್ಲ. ಏಕೆಂದರೆ ಆತನೂ, ಆತನ ಅಣ್ಣನ ಮಗನೂ ಅಪ್ಪ ಮತ್ತೆ ಬರಲಾರರು ಅನ್ನುವ ಆಶಾವಾದದಲ್ಲಿ ಅಪ್ಪನ ಕ್ರೆಡಿಟ್ ಕಾರ್ಡಿನಿಂದ ಸ್ವಲ್ಪ ಖರ್ಚು ಮಾಡಿಕೊಂಡುಬಿಟ್ಟಿರುತ್ತಾರೆ. ಈಗ ಅಪ್ಪ ಅದರ ಲೆಕ್ಕ ಕೇಳಿದರೆ ಅಂತ ಭಯವಾಗಲು ತೊಡಗುತ್ತದೆ.

ಆ ಭಯವನ್ನು ಹೋಗಿಸಿಕೊಳ್ಳಲು ಆತ ಏನು ಮಾಡಬಹುದು??? ಇದೇ ಸಿನೆಮಾ…

ಉಳಿದ ಅಣ್ಣಂದಿರಂತೆ ಕೆಲಸಕ್ಕೆ ಬಾರದ ಈತ ಈಗ ಮಾತ್ರ ಮಾಡಬಾರದ್ದು ಮಾಡುತ್ತಾನೆ. ಏಕೆಂದರೆ ಈಗ ಅವನ ಕರ್ಮ ಕುತ್ತಿಗೆಗೆ ಬಂದಿದೆ. ಈಗವನು ಹೇಗಾದರೂ ಮಾಡಿ ಅದರಿಂದ ತಪ್ಪಿಸಿಕೊಳ್ಳಲೇಬೇಕಿದೆ. ಈ ಅನಿವಾರ್ಯತೆಯು ಒಬ್ಬ ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯವಾಗಿಸುತ್ತದೆ. ಪರಿಸ್ಥಿತಿಗೆ ನಮ್ಮನ್ನು ಹೇಗೆ ಬೇಕಾದರೂ ಬದಲಾಯಿಸುವ ಶಕ್ತಿ ಇದೆ. ಆ ಬದಲಾವಣೆ ಒಳ್ಳೆಯದೋ ಕೆಟ್ಟದೋ ಅಂತ ನಿರ್ಣಯಿಸುವುದು ನಮ್ಮ ಸಂಸ್ಕಾರ.

ಚಿಕ್ಕಂದಿನಿಂದ ತಾನು ಬೆಳೆದು ಬಂದ ಪರಿಸರ, ತನ್ನ ಅಸಹಾಯಕತೆ, ಒದೆ ತಿನ್ನುತ್ತಿದ್ದ ಜೀವನ, ಸ್ವತಂತ್ರವಾಗಿ ಯೋಚಿಸಲಾಗದ ತನ್ನ ಪರಿಸ್ಥಿತಿಯನ್ನು “ಜೋಜಿ” ಬದಲಾಯಿಸಿಕೊಳ್ಳಬೇಕು ಅಂದುಕೊಂಡಿದ್ದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಅಂತಹದ್ದೇ ಪರಿಸ್ಥಿತಿಯಲ್ಲಿ ಬೆಳೆದವರಿಗೆ ಇದು ಬೇಗ ಅರ್ಥವಾಗುತ್ತದೆ. ಆದರೆ ಆತ ತನ್ನ ಪರಿಸ್ಥಿತಿಯನ್ನು ಬದಲಾಯಿಸಲು ಬಳಸಿಕೊಂಡ ದಾರಿ ಮಾತ್ರ ಕೆಟ್ಟದು.

ಇದರಿಂದ ತಿಳಿಯುವ ಮತ್ತೊಂದು ನೀತಿಯೆಂದರೆ….

‘ದುಡ್ಡಿಲ್ಲದೇ ಬೇಕಾದರೆ ಬದುಕಬಹುದು. ಆದರೆ ತಪ್ಪು ಮಾಡಿ, ನಮ್ಮ ಆತ್ಮಸಾಕ್ಷಿಯನ್ನು ವಂಚಿಸುತ್ತಾ, ಆ ಪಾಪಪ್ರಜ್ಞೆಯನ್ನು ಇಟ್ಟುಕೊಂಡು ಬದುಕಲು ಸಾಧ್ಯವೇ ಇಲ್ಲ’ ಎನ್ನುವುದು. ಇಂತಹಾ ಪಾತ್ರವನ್ನು ನಿರ್ವಹಿಸಿರುವ ಜೋಜಿ (ಫಹಾದ್ ಫಾಸಿಲ್) , ಈ ಕೃತ್ಯದ ಮೊದಲೂ ಮತ್ತು ನಂತರವೂ ತನ್ನ ಉಡುಗೆ-ತೊಡುಗೆಯಲ್ಲಾಗಲೀ, ತನ್ನ ನಡಿಗೆಯಲ್ಲಾಗಲೀ, ನಡವಳಿಕೆಯಲ್ಲಾಗಲೀ ವ್ಯತ್ಯಾಸಗಳನ್ನು ತೋರಿಸುತ್ತಾ ಸೂಕ್ಷ್ಮವಾಗಿ ಅರ್ಥ ಮಾಡಿಸುತ್ತಾನೆ. ನಟನಾ ದೈತ್ಯನಾದ ಫಾಸಿಲ್ ಇಲ್ಲಿ ಜೋಜಿಯೇ ಆಗಿಬಿಟ್ಟಿದ್ದಾನೆ.

ಈ ಸಿನೆಮಾದಲ್ಲಿ ಪ್ರೀತಿ, ಪ್ರೇಮ, ಪ್ರಣಯವಿಲ್ಲ. ಒಂದು ಹಾಡೂ ಸಹ ಇಲ್ಲ. ನಾಯಕ-ನಾಯಕಿಯಿಲ್ಲ. ಆದರೆ ಎಲ್ಲರಲ್ಲಿಯೂ ಒಂದು ತೀರದ ಮೋಹವಿದೆ. ದುರಾಸೆಯಿದೆ. ಈ ಸಿನೆಮಾ ಷೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ “ಮ್ಯಾಕ್ ಬೆತ್” ನಿಂದ ಪ್ರೇರಿತವಾಗಿದೆ. ನಾಟಕ ಗೊತ್ತಿರುವವರು ಕಥೆಯನ್ನು ಊಹಿಸಿಕೊಳ್ಳಬಹುದು.

ನಿಧಾನಗತಿಯ ಈ ಸಿನೆಮಾ ಆಸ್ವಾದಿಸಲು‌ ತಾಳ್ಮೆ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಎಷ್ಟೋ ದೊಡ್ಡ ದೊಡ್ಡ ಸಾಮ್ರಾಜ್ಯಗಳ ನೈಜ ಕಥೆಯಂತಿದೆ ಇದು. ದುಡ್ಡಿದ್ದವನೇ ದೊಡ್ಡಪ್ಪ ಅಂತೀವಿ ನಾವು. ಆದರೆ ಅವರಿಗೊಂದು ಚೂರು ಮನಃಶಾಂತಿಯೂ ಇರುವುದಿಲ್ಲ ಅಂತ ಗೊತ್ತಾದಾಗ ನಗುವುದೋ ಅಳುವುದೋ ಅಂತ ಹೊಳೆಯುವುದಿಲ್ಲ.

ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ. ಆಸಕ್ತರು ವೀಕ್ಷಿಸಬಹುದು.

************
ಕೆ.ಎ.ಸೌಮ್ಯ
ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply