ಎಲ್ಲೆಲ್ಲೂ ಕೇಳಿ ಬರುತ್ತಿರುವ, ರಾಕಿ ಔರ್ ರಾಣಿ ಚಿತ್ರದ ವೈರಲ್ ಹಾಡು.
ಈ ಹಾಡಿನ ಧಾಟಿ ಎಲ್ಲೋ ಕೇಳಿದಂತಿದೆದೆಯಲ್ಲಾ ಎಂದು ಯುವಜನರು ಅಂದುಕೊಂಡರೆ, ಹೌದಪ್ಪ, ಇದು 1966 ರಲ್ಲಿ ಬಿಡುಗಡೆಯಾದ ಸಾಧನಾ ಹಾಗು ಸುನಿಲ್ ದತ್ ಅಭಿನಯದ ‘ಮೇರಾ ಸಾಯಾ’ ಚಿತ್ರದ ಹಾಡು ಎಂದು ಹಿರಿಯ ಸಿನಿ ಪಂಡಿತರು ಹೇಳುತ್ತಿದ್ದಾರೆ.
ಮೇರಾ ಸಾಯಾ ಸಿನಿಮಾದ ಈ ಹಾಡು ನಮಗೆ ‘ಸ್ಟಾರ್ ಆಫ್ ದಿ ಮಿಲೆನಿಯಂ’ ಅಮಿತಾಬ್ ಬಚ್ಚನ್ ಅವರನ್ನು ತಂದುಕೊಟ್ಟಿತು ಎಂಬ ವಿಷಯ ನಿಮಗೆ ಗೊತ್ತಾ…?

ಹೌದು! ಅಮಿತಾಬ್ ಅವರ ತಾಯಿ ತೇಜಿ ಸೂರಿ ಹಾಗು ಹರಿವಂಶ್ ರಾಯ್ ಬಚ್ಚನ್ ಮೊದಲ ಬಾರಿ 1941 ರಲ್ಲಿ ಬರೇಲಿಯಲ್ಲಿ ಹೊಸ ವರ್ಷದ ಪಾರ್ಟಿಯೊರಲ್ಲಿ ಭೇಟಿಯಾದರು. ಆ ಭೇಟಿ ಸಹಜವಾಗಿಯೆ ಇಬ್ಬರ ನಡುವೆ ಪ್ರೇಮಾಂಕುರಕ್ಕೆ ನಾಂದಿಯಾಯಿತು. ಅಲ್ಲಿರುವ ಗೆಳೆಯರಲ್ಲಿ ರಾಜಾ ಮೆಹೆಂದಿ ಅಲಿ ಅವರು ಕೆಲ ದಿನಗಳ ನಂತರ ತೇಜಿ ಅವರನ್ನು ಅವರ ಪ್ರೇಮ ಪ್ರಸಂಗದ ವಿಷಯದ ಬಗ್ಗೆ ವಿಚಾರಿಸಿದಾಗ, ತೇಜಿ ಅವರು “ಕ್ಯಾ ಕಹೆ ರಾಜಾ… ಮೇರಾ ಝಂಕಾ ತೋ ಬರೇಲಿ ಮೇ ಹೀ ಗಿರಗಯಾ”(ನನ್ನ ಹೃದಯವನ್ನು ಕೊಟ್ಟುಬಿಟ್ಟೆ ಎಂಬರ್ಥ ಬರುವಂತೆ “ನನ್ನ ಝಂಕಿ ಬರೇಲಿಯಲ್ಲಿಯೇ ಬಿದ್ದು ಬಿಟ್ಟಿತು) ಎಂದು ರಾಗವಾಗಿ ಹೇಳಿದ್ದರಂತೆ.

ಮುಂದೆ 1966 ರಲ್ಲಿ, ರಾಜಾ ಮೆಹಂದಿ ಅಲಿ ಖಾನ್ ಅವರಿಗೆ ‘ಮೇರಾ ಸಾಯಾ’ ಚಿತ್ರದ ಹಾಡಿನ ಸಾಹಿತ್ಯ ಬರೆಯಲು ಹೇಳಿದಾಗ ಅವರು ತೇಜಿ ಅವರು ಹೇಳಿದ ಆ ಸಾಲನ್ನು ತಮ್ಮ ಹಾಡಿನಲ್ಲಿ ಸೇರಿಸಿದರು. ಅದಾಗಲೇ ತೇಜಿ ಸೂರಿ, ತೇಜಿ ಬಚ್ಚನ್ ಆಗಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಿಬಹುದು. ಈವರ ಸುಪುತ್ರ ಅಮಿತಾಬ್ ಬಚ್ಚನ್.
ತೇಜಿ ಅವರ ಆ ಸಾಲು ಈಗ ಅಜರಾಮರವಾಯಿತು, ಎಲ್ಲರ ಬಾಯಲ್ಲಿ ಹಾಡಾಗಿ ಗುನುಗಿತು. ಈಗಲೂ ಈ ಹಾಡಿನ ಸಾಲು ಅಷ್ಟೇ ಪ್ರಮಾಣದ ಪ್ರೀತಿಯನ್ನು ಬಾಚಿಕೊಳ್ಳುತ್ತಿದೆ.
ಲೇಖಕರು:ಮೃಣಾಲಿನಿ