೧೯೬೫ ರಲ್ಲಿ ತೆರೆ ಕಂಡ ಡಾ.ರಾಜ್ ಕುಮಾರ್ ನಟನೆಯ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಬರುವ ವೀರಬಾಹುವಿನ ಪಾತ್ರದಲ್ಲಿ ಮೂಡಿ ಬಂದ ಮನೋಜ್ಞ ಅಭಿನಯ ಮತ್ತು ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ ನೃತ್ಯ ಸನ್ನಿವೇಶದ ಮೂಲಕ ರಾತ್ರೋರಾತ್ರಿ ಜನಪ್ರಿಯ ನಟನಾಗಿ ಪ್ರಸಿದ್ಧಿ ಪಡೆದಿದ್ದರು. ನಾಲ್ಕು ವರ್ಷಗಳ ನಂತರ ೧೯೬೯ ರಲ್ಲಿ ತಮ್ಮ ಭರಣಿ ಫಿಲಂಸ್ ಲಾಂಛನದಲ್ಲಿ ಮೊದಲ ಬಾರಿಗೆ ಕಾಡಿನ ರಹಸ್ಯ ಎಂಬ ಚಿತ್ರವನ್ನು ನಿರ್ಮಿಸುವುದರ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದರು. ಆದರೆ ಈ ಚಿತ್ರದ ಕುರಿತು ಮೂರು ವಿಶೇಷ ಸಂಗತಿಗಳಿವೆ.
೧) ಈ ಕಥೆಯ ರಚನಾಕಾರರು ಮತ್ತು ಈ ಚಿತ್ರದಲ್ಲಿ ಕಾಳ ಎನ್ನುವ ಪಾತ್ರವನ್ನು ನಿರ್ವಹಿಸಿದ್ದರು.
೨) ಆಗಿನ ಕಾಲದಲ್ಲಿ ಈ ಚಿತ್ರವನ್ನು ಇಂಗ್ಲೀಷ್ ಭಾಷೆಯ ಚಿತ್ರದ ರೀತಿಯಲ್ಲಿ ತಯಾರಿಸಲಾಗಿತ್ತು. ಈ ಚಿತ್ರ ಬಿಡುಗಡೆ ಆದ ನಂತರ ಸೃಷ್ಟಿಸಿದ ಟ್ರೆಂಡ್ ಹಾಲಿವುಡ್ ಶೈಲಿಯನ್ನು ಮೀರಿಸಿತ್ತು.
೩) ಕನ್ನಡ ಚಿತ್ರರಂಗದಲ್ಲಿ ಟೈಗರ್ ಎಂದು ಪ್ರಸಿದ್ಧಿ ಪಡೆದಿದ್ದ ನಟ ಟೈಗರ್ ಪ್ರಭಾಕರ್ ನಟನೆಯ ಮೊದಲ ಚಿತ್ರ.
ಅಂದ ಹಾಗೆ ಬರೆಯುತ್ತ ಒಂದು ವಿಷಯವನ್ನು ಹೇಳಲು ಮರೆತಿದ್ದೆ. ಇವರು ವಿನೂತನ ಪ್ರಯೋಗದ ಸಾಹಸಿ ಎನ್ನಲು ಗಂಧದ ಗುಡಿ ಚಿತ್ರವೇ ಉತ್ತಮ ಉದಾಹರಣೆಯಾಗಿದೆ. ಈ ಚಿತ್ರವು ಕನ್ನಡಿಗರ ಕಣ್ಮಣಿ,ವರನಟ ಡಾ.ರಾಜ್ ಕುಮಾರ್ ನಟನೆಯ ೧೫೦ ನೇ ಚಿತ್ರವಾಗಿದ್ದರಿಂದ ನಿರ್ದೇಶನದ ಹೊಣೆಯು ಇವರದಾಗಿತ್ತು. ಮೇಲಾಗಿ ಈ ಚಿತ್ರವು ವನ್ಯ ಜೀವಿಗಳ ರಕ್ಷಣೆಯ ಕುರಿತ ಕಥೆಯನ್ನು ಹೊಂದಿದ್ದರಿಂದ ಸಂಪೂರ್ಣವಾಗಿ ಕಾಡಿನಲ್ಲಿ ಚಿತ್ರೀಕರಣವನ್ನು ಮಾಡುವ ಅನಿವಾರ್ಯತೆ ಎದುರಾಗಿತ್ತು. ಅದರಲ್ಲೂ ಕಾಡಿನಲ್ಲಿ ಚಿತ್ರೀಕರಣದ ಕೆಲಸ ಸುಲಭದ ಮಾತಲ್ಲ.
ಹೆಜ್ಜೆ ಹೆಜ್ಜೆಗೂ ಎದುರಾಗುವ ಸಮಸ್ಯೆಗಳು, ಆತಂಕಗಳ ಕುರಿತು ಹೇಳಲು ಸಾಧ್ಯವಿಲ್ಲ. ಮುಖ್ಯವಾಗಿ ಒಬ್ಬ ಜನಪ್ರಿಯ ನಟನ ಚಿತ್ರವನ್ನು ನಿರ್ದೇಶಿಸುವ ನಿರ್ದೇಶಕನಿಗೆ ಒತ್ತಡ ಎದುರಾಗುವುದು ಸಹಜ. ಇದೇ ರೀತಿ ಅನೇಕ ಒತ್ತಡಗಳ ನಡುವೆ ಇವರ ನಿರ್ದೇಶನದಲ್ಲಿ ಮೂಡಿ ಬಂದ ಡಾ.ರಾಜ್ ಕುಮಾರ್ ನಟನೆಯ ೧೫೦ ನೇ ಚಿತ್ರ ತೆರೆ ಕಂಡ ನಂತರ ಪ್ರತಿಯೊಬ್ಬ ಕನ್ನಡಿಗನಿಗೆ ಮಾಡಿದ ಮೋಡಿಯನ್ನು ಮರೆಯಲು ಆಗುತ್ತದೆಯೇ?